=== ಬಾಲ್ಯ ಮತ್ತು ಜೀವನ === ಶ್ರೀ ಕೊಚುಸೆಫ್ ಚಿಟ್ಟಿಲಪಿಲ್ಲಿಯವರು ಕೇರಳದ ತ್ರಿಶೂರ್ ಸಮೀಪದ ಪರಪ್ಪೂರ್ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದರು. ಅಲ್ಲೇ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತ್ರಿಶೂರ್ನ ಸೈಂಟ್ ಥಾಮಸ್ ಕಾಲೇಜ್‌ನಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. === ವೃತ್ತಿ ಜೀವನ === ತಿರುವನಂತಪುರದ ಟೆಲೆಕ್ಸ್ ಎಂಬ ಮಧ್ಯಮ ಗಾತ್ರದ ಎಲೆಕ್ಟ್ರಾನಿಕ್ ಸ್ಟೆಬಿಲೈಜರ್ ತಯಾರಿಕಾ ಸಂಸ್ಠೆಯೊಂದರಲ್ಲಿ ಮೇಲ್ವಿಚಾರಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ಇವರು ಮೂರು ವರ್ಷಗಳ ನಂತರ ಆ ಕೆಲಸ ತ್ಯeಸಿ, ಅಲ್ಲಿ ಪಡೆದ ಅನುಭವದೊಂದಿಗೆ ೧೯೭೭ರಲ್ಲಿ ಸ್ವತಃ ತಾವೇ “ವಿ-ಗಾರ್ಡ್” ಹೆಸರಿನ ಸ್ಟೆಬಿಲೈಜರ್ ತಯಾರಿಕಾ ಘಟಕವನ್ನು ಸ್ಠಾಪಿಸಿದರು. ಆಗ ಅವರ ಜೊತೆ ಇದ್ದದ್ದು ಕೇವಲ ಇಬ್ಬರು ಕೆಲಸಗಾರರನ್ನಷ್ಟೇ. ಅವರಿಬ್ಬರ ಸಹಾಯದಿಂದಲೇ ಪ್ರ್ರಾರಂಭದಲ್ಲಿ ತಿಂಗಳಿಗೆ ೫೦ ಸ್ಟೆಬಿಲ್ಶೆಜರ್‌ಗಳನ್ನು ತಯಾರಿಸಿ ತಮ್ಮ ಲ್ಯಾಂಬ್ರೆಟ್ ಸ್ಕೂಟರಿನಲ್ಲೇ ತೆರಳಿ ತಿರುವನಂತಪುರದೆಲ್ಲೆಡೆ ಮಾರಾಟ ಮಾಡುತ್ತಿದ್ದರು. ೧೯೮೫ರಲ್ಲಿ ವಿ-ಗಾರ್ಡ್ ಹೆಸರಿನಡಿಯಲ್ಲಿ ತಯಾರಾದ ಉತ್ಪನ್ನಗಳ ಮಾರಾಟಕ್ಕೆಂದೇ ‘ಮೇ: ಪ್ರಾಂಪ್ಟ್ ಇಂಡಿಯಾ’ ಎಂಬ ಸಂಸ್ಥೆಯನ್ನೂ ಸ್ಥಾಪಿಸಿದರು. ೧೯೯೨ರಲ್ಲಿ ಕೆಲವು ಸ್ಟೆಬಿಲ್ಶೆಜರ್ ತಯಾರಿಕಾ ಘಟಕಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಉದ್ಯಮವನ್ನು ವಿಸ್ತರಿಸಿಕೊಂಡರು. ೧೯೯೬ ಫೆಬ್ರವರಿ ೧೨ರಂದು ‘ವಿ-ಗಾರ್ಡ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್’ ಎಂಬ ಹೆಸರಿನಲ್ಲಿ ಸಂಸ್ಥೆಯು ಅಧಿಕೃತವಾಗಿ ಮಾನ್ಯತೆ ಪಡೆಯಿತು. ೨೦೦೭ರಲ್ಲಿ ಸಾರ್ವಜನಿಕ ಉದ್ದಿಮೆಯಾಗಿ ಬದಲಾಯಿತು. === ವೀಗಾ ಲ್ಯಾಂಡ್ ಹಾಗೂ ವಂಡರ್ ಲಾ ಸ್ಥಾಪನೆ === ೨೦೦೦ನೇ ಇಸವಿಯಲ್ಲಿ ಕೇರಳದ ಕೊಚ್ಚಿಯಲ್ಲಿ ಸುಮಾರು ೭೫ ಕೋಟಿ ರೂಪಾಯಿಗಳ ವೆಚ್ಛದಲ್ಲಿ ಭಾರತದಲ್ಲೇ ಅತಿ ದೊಡ್ಡದಾದ ಮನೋರಂಜನಾ ಪಾರ್ಕ್ “ವೀಗಾ ಲ್ಯಾಂಡ್”(ಈಗ ವಂಡರ್ ಲ್ಯಾಂಡ್ ಎಂದಾಗಿದೆ) ನಿರ್ಮಾಣ ಮಾಡಿದರು. ಇದರ ಮುಂದುವರೆದ ಭಾಗವಾಗಿ ೨೦೦೪ರಲ್ಲಿ ಸುಮಾರು ೧೦೫ ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ “ವಂಡರ್-ಲಾ” ನಿರ್ಮಿಸಿದರು. ಇಂದು ‘ವಂಡರ್-ಲಾ’ ಭಾರತದ ಅತಿ ದೊಡ್ಡ ಮನೋರಂಜನಾ ಪಾರ್ಕ್ ಮಾತ್ರವಲ್ಲದೆ, ಪರಿಸರ ಸ್ನೇಹಿ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಪುನರ್ಬಳಕೆಯ ವಿಧಾನಗಳ ಅನುಸರಿಸುವಿಕೆಯಿಂದಾಗಿ ‘ಐ ಎಸ್ ಒ ೧೪೦೦೧-೨೦೦೪’ ಪ್ರಮಾಣ ಪತ್ರ ಪಡೆದ ಭಾರತದ ಮೊದಲ ಮನೋರಂಜನಾ ಪಾರ್ಕ್ ಎಂಬ ಕೀರ್ತಿಗೆ ಪಾತ್ರವಾಗಿದೆ. === ಉದ್ಯಮ ಕ್ಷೇತ್ರದಲ್ಲಿ === ಇಂದು ಚಿಟ್ಟಿಲಪಿಲ್ಲಿಯವರು ಕೇರಳದ ಅತ್ಯಂತ ಯಶಸ್ವಿ ಉದ್ಯಮಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಸುಮಾರು ೯೦೦ ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ವಿ-ಗಾರ್ಡ್ ಸಮೂಹದ ಪ್ರಮುಖ ಉತ್ಪನ್ನವಾದ ಸ್ಟೆಬಿಲ್ಶೆಜರ್ ಹೊರತುಪಡಿಸಿ, ನೀರಿನ ಪಂಪ್‌ಗಳು, ನೀರು ಕಾಯಿಸುವ ಉಪಕರಣಗಳು, ಯು.ಪಿ.ಎಸ್‌ಗಳು, ವ್ಯೆರಿಂಗ್ ಕೇಬಲ್‌ಗಳು ಮತ್ತು ಸ್ಟಾರ್ಟರ್ ಗಳೂ ಸಹಾ ತಮ್ಮ ಗುಣಮಟ್ಟ ಹಾಗು ಕಾರ್ಯ ದಕ್ಷತೆಯಿಂದಾಗಿ ದೇಶಾದಾದ್ಯಂತ ಮನೆಮಾತಾಗಿವೆ. ಹಾಗೆಯೇ ಇವರದೇ ಮಾಲಿಕತ್ವದಲ್ಲಿ‘ವಂಡರ್-ಲಾ ಹಾಲಿಡೇಸ್’- ಮನರಂಜನಾ ಪಾರ್ಕ್ಗಳ ನಿರ್ಮಾಣದಲ್ಲೂ,‘ವಿ-ಸ್ಟಾರ್ ಕ್ರಿಯೇಷನ್ಸ್’ಸಿದ್ದ ಉಡುಪುಗಳ ತಯಾರಿಕೆಯಲ್ಲೂ ಖ್ಯಾತಿ ಗಳಿಸಿವೆ. === ಪ್ರಶಸ್ತಿ, ಪುರಸ್ಕಾರಗಳು === ಇವರ ಸಾಧನೆಯನ್ನು ಪರಿಗಣಿಸಿ ಹಲವು ಪ್ರಶಸ್ತಿಗಳು, ಪ್ರಮುಖವಾಗಿ-ಭಾರತ ಸರ್ಕಾರದ ಪ್ರತಿಷ್ಟಿತ ‘ರಾಷ್ಟ್ರೀಯ ಸಮ್ಮಾನ್’, ಹಣಕಾಸು ಸಚಿವಾಲಯದಿಂದ ‘ಅತಿ ಹೆಚ್ಚು ತೆರಿಗೆ ಪಾವತಿಸಿದ ವ್ಯಕ್ತಿ’ ಹಾಗು ಕೇರಳ ಸರ್ಕಾರದಿಂದ ‘ಟೂರಿಸಮ್ ಮ್ಯಾನ್ ಆಫ಼್ ದಿ ಇಯರ್ ೨೦೦೦’, ಮಿಲೇನಿಯಮ್ ಬ್ಯುಸಿನೆಸ್ ಮ್ಯಾನ್ ಆಫ್ ಕೇರಳ’ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರ ಈ ಸಾಧನೆಯ ಹಿಂದೆ ಇವರ ಕುಟುಂಬದ ಕೊಡುಗೆಯೂ ಬಹಳಷ್ಟಿದೆ, ಪತ್ನಿ ಶೀಲಾರವರು ವಿ-ಸ್ಟಾರ್ ಕ್ರಿಯೇಷನ್ಸ್ ಸಮೂಹದ ಮುಖ್ಯ ಕಾರ್ಯ ನಿರ್ವಾಹಕಿಯಾಗಿಯೂ, ಹಿರಿಯ ಪುತ್ರ ಅರುಣ್‌ರವ್‌ರು - ‘ವಂಡರ್-ಲಾ ಹಾಲಿಡೇಸ್’ನ ನಿರ್ವಹಣೆಯಲ್ಲಿಯೂ ಮತ್ತು ಕಿರಿಯ ಪುತ್ರ ಮಿಥುನ್‌ರವರು ವಿ-ಗಾರ್ಡ್ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ವಿಸ್ತರಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. === ಲೇಖಕರಾಗಿ === ಚಿಟ್ಟಿಲಪಿಲ್ಲಿಯವರು ಒಬ್ಬ ಲೇಖಕರೂ ಹೌದು. ತಮ್ಮ ಯಶಸ್ಸಿಗೆ ಕಾರಣವಾದ ಎಲ್ಲ ಅಂಶಗಳನ್ನು ಹಾಗೂ ಅನುಭವಗಳನ್ನು ಸೇರಿಸಿ ‘ . & ’, ಎನ್ನುವ ಕಿರಿಯ ಉದ್ಯಮಿಗಳಿಗೆ ಮಾರ್ಗದರ್ಶಿಯಾಗುವಂತಹ ಪುಸ್ತಕವನ್ನೂ ಪ್ರಕಟಿಸಿದ್ದಾರೆ. === ಸಮಾಜಸೇವೆಯಲ್ಲಿ === ‘ಚಿಟ್ಟಿಲಪಲ್ಲಿ ಪ್ರತಿಷ್ಠಾನ’ದ ಮೂಲಕ ವಂಡರ್-ಲಾ ಹಾಗೂ ವೀಗಾ ಲ್ಯಾಂಡ್ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಪ್ರತಿವರ್ಷ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವುದು, ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಪುಸ್ತಕ, ಸಮವಸ್ತ್ರ ವಿತರಿಸುವುದರ ಜೊತೆಗೆ ಆಯಾ ಗ್ರಾಮಗಳ ರೈತರಿಗೆ ಆರೋಗ್ಯ ವಿಮೆಯನ್ನೂ ಮಾಡಿಸುವ ಮೂಲಕ ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಅಂದರೆ ೨೦೧೧ರ ಫೆಬ್ರವರಿಯಲ್ಲಿ ಕಿಡ್ನಿಯ ಅಗತ್ಯವಿದ್ದ ರೋಗಿಯೊಬ್ಬರಿಗೆ ತಮ್ಮ ಒಂದು ಕಿಡ್ನಿಯನ್ನು ದಾನ ಮಾಡಿರುವುದು ಇವರಲ್ಲಿನ್, ಮಾನವೀಯತೆ ಹಾಗೂ ಪರೋಪಕಾರದ ಗುಣಕ್ಕೆ ಶ್ರೇಷ್ಟ ನಿದರ್ಶನ ಎನಿಸುತ್ತದೆ. ಪ್ರಶಾಂತ್ ಮಾಗಡಿ